top of page

ಉತ್ತರ ಪ್ರದೇಶ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ

  • Mar 16, 2018
  • 1 min read

ಉತ್ತರ ಪ್ರದೇಶ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ, 'ಉ.ಪ್ರದೇಶದ ಉಪಚುನಾವಣೆ ಫಲಿತಾಂಶ ರಾಷ್ಟ್ರ ರಾಜಕಾರಣದ ಮೇಲೆ ಪರಿಣಾಮ ಬೀರಲಿದೆ' ಎಂದಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ದೇಶದಲ್ಲಿ ಈಗಾಗಲೇ ಕಾಂಗ್ರೆಸ್‌ನ ಶಕ್ತಿ ಕ್ಷೀಣಿಸಿದೆ, ಬಿಜೆಪಿ ಕೂಡಾ ಅವಸಾನದ ಹಾದಿ ಹಿಡಿಯಲಿದೆ. ಹಾಗಾಗಿ ತೃತೀಯ ರಂಗಕ್ಕೆ ಉತ್ತಮ ಅವಕಾಶ ದೊರೆಯಲಿದೆ' ಎಂದು ಅವರು ಭರವಸೆ ವ್ಯಕ್ತಪಡಿಸಿದರು. ಉತ್ತರ ಪ್ರದೇಶದಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿಯನ್ನು 'ಆಶಾದಾಯಕ' ಬೆಳವಣಿಗೆ ಎಂದು ಕರೆದ ದೇವೇಗೌಡರು, 'ನಾನೇ, ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಮಾಯಾವತಿ ಅವರಿಗೆ ಆಹ್ವಾನ ನೀಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಬದಿಗೆ ಸರಿಸಿಯೇ ಜನರ ಬಳಿ ಮತ ಯಾಚಿಸಲು ಹೋಗುತ್ತೇವೆ' ಎಂದರು. ಜೆಡಿಎಸ್‌ನ ಉಚ್ಚಾಟಿತ ಶಾಸಕರ ಬಗ್ಗೆ ಮಾತನಾಡಿದ ದೇವೇಗೌಡ ಅವರು 'ಈ ವಿಷಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಮೊರೆ ಹೋಗುತ್ತೇವೆ, ಕಾಂಗ್ರೆಸ್‌ಗೆ ಮತ ಹಾಕಿದ್ದಕ್ಕೆ ಉಚ್ಛಾಟಿಸಲಾಗಿತ್ತು, ಅವರು ಈ ಬಾರಿಯೂ ಕಾಂಗ್ರೆಸ್‌ಗೆ ಮತ ಹಾಕುತ್ತೇವೆ ಎನ್ನುತ್ತಿರುವುದು ಉದ್ಧಟತನ' ಎಂದು ದೇವೇಗೌಡ ಅವರು ಆಕ್ರೋಶ ವ್ಯಕ್ತಪಡಿಸಿದರು. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದ ಬಗ್ಗೆ ಮಾತನಾಡಲು ಒಲ್ಲೆನೆಂದ ದೇವೇಗೌಡ ಅವರು 'ನನಗೆ ಎಲ್ಲಾ ಸ್ವಾಮಿಗಳ ಬಗ್ಗೆಯೂ ಗೌರವ ಇದೆ, ಎಲ್ಲರೊಂದಿಗೂ ನಾನು ಗೌರವದಿಂದಲೇ ನಡೆದುಕೊಂಡಿದ್ದೇನೆ' ಎಂದು ದೇವೇಗೌಡ ಹೇಳಿದರು. ಕಾವೇರಿ ನೀರು ನಿರ್ವಹಣಾ ಸಮಿತಿ ರಚನೆ ಕುರಿತ ತೀರ್ಪಿಗೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಲಿಲ್ಲವೆಂದರೆ ಪ್ರತಿಭಟನೆ ಮಾಡುವುದಾಗಿ ದೇವೇಗೌಡ ಅವರು ಹೇಳಿದರು. 'ಈಗಾಗಲೇ, ನಿರ್ವಹಣಾ ಸಮಿತಿ ರಚಿಸಿದರೆ ಆಗಬಹುದಾದ ಸಮಸ್ಯೆಗಳ ಬಗ್ಗೆ ನರೇಂದ್ರ ಮೋದಿ ಹಾಗೂ ನಿತಿನ್ ಗಡ್ಕರಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ, ಸುಪ್ರೀಂ ತೀರ್ಪು ಪಾಲಿಸುವುದಾಗಿ ಅವರು ಹೇಳಿದ್ದಾರೆ' ಎಂದು ದೇವೇಗೌಡ ಹೇಳಿದರು. ತಮಿಳುನಾಡಿಗೆ ಅನ್ಯಾಯ ಮಾಡುವ ಉದ್ದೇಶ ನಮಗಿಲ್ಲ ಆದರೆ ನಮ್ಮ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಆಗಬಾರದು. ರೈತರ ಹಿತಾಸಕ್ತಿಯಿಂದಾದರೂ ರಾಜ್ಯ ಸರ್ಕಾರ ನಿರ್ವಹಣಾ ಸಮಿತಿ ರಚನೆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು ಎಂದು ದೇವೇಗೌಡ ಹೇಳಿದರು. ಆದರೆ ಸರ್ಕಾರ ಮೇಲ್ಮನವಿ ಸಲ್ಲಿಸದಿರುವ ಬಗ್ಗೆ ನಿರ್ಣಯ ತಳೆದಿದೆ.


Comments


!
Widget Didn’t Load
Check your internet and refresh this page.
If that doesn’t work, contact us.

© 2023 by Trademark.Proudly created with,Alpha Web Hosting

hassan connect kannada.png
bottom of page